ಅಭಿವೃಧ್ಧಿ ಪಥದ ಮೇಲೆ ಮನುಷ್ಯನ ನಡಿಗೆಯಲ್ಲಿ ಬರವಣಿಗೆಯೊಂದು ದಾಪುಗಾಲು. ಹಲವು ಶತಮಾನಗಳ ಕನಸನ್ನು ಸಾಕಾರಗೊಳಿಸಿದ ಹೆಜ್ಜೆ. ಬರವಣಿಗೆ ರೂಢಿಯಾದ ಮೇಲೆ ಮುದ್ರಣವು ಇನ್ನೊಂದು ಮಹತ್ತರ ತಿರುವು. ಹಾಗೆಯೇ ನಮ್ಮ ಅಭಿವೃದ್ಧಿಯ ದಾರಿಯಲ್ಲಿ ಮನುಷ್ಯನ ಧ್ವನಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿಸ್ತರಿಸುವುದು ದೊಡ್ಡ ಸವಾಲಾಗಿತ್ತು. ಒಬ್ಬನ ಧ್ವನಿ ಎಷ್ಟು ದೂರ ಕೇಳಬಹುದು? ನಾವು ಆಧುನಿಕರು ದೊಡ್ಡದಾಗಿ ಮಾತನಾಡುವುದನ್ನೂ ಅನಾಗರಿಕತೆ ಎಂದು ಯೋಚಿಸುವವರು ದೊಡ್ಡದಾಗಿ, ದೂರಕ್ಕೆ ಕೇಳುವಂತೆ ಕೂಗಲಾರೆವು. ಅದೇ ಹಳ್ಳಿ ಹೈದರು ಕಿಲೋಮೀಟರು ಗಟ್ಟಲೆ ದೂರ ಕೇಳುವಂತೆ ಕೂ ಹಾಕಬಹುದು. ಕೂಗಳತೆಯ ದೂರ ಎಂಬುದು ನಮ್ಮಲ್ಲಿ ದೂರದ ಅಳತೆಗೊಲಾಗಿತ್ತು. ಹಿಂದೆಲ್ಲ ಕಾಡಿಗೆ ಹೋದವರು ದಾರಿತಪ್ಪಿದರೆ ಕುಹೂ ಎಂದು ಬಹಳ ದೂರ ಕೇಳುವಂತೆ ಕೂಗುವ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಈಗ ಹಾಗೆ ಕೂಗುವುದೂ ಕೂಡ ಚರಿತ್ರೆಗೆ ಸೇರಿಬಿಟ್ಟಿದೆ.
ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದುಕಡೆಯಿಂದ ಇನ್ನೊಂದು ಕಡೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಗ್ರಹಾಂ ಬೆಲ್ ದೂರವಾಣಿಯ ಸಂಶೋಧನೆ ಮಾಡಿದ್ದು ಅಂಥ ಬಹುದಿನಗಳ ಬೇಡಿಕೆಯನ್ನು ಪೂರೈಸಿತು. ಆಗ ಇದ್ದುದು ವೈರುಗಳ ಮೂಲಕ ಸಂಪರ್ಕ ಸಾಧಿಸುವ ದೂರವಾಣಿ. ಇಲ್ಲಿಂದ ಇಂಗ್ಲೆಂಡಿಗೆ ಫೋನು ಮಾಡುವುದಿದ್ದರೂ ನಿಮ್ಮ ಧ್ವನಿ ತಂತಿಯ ಮೂಲಕವೇ ಸಾಗಬೇಕಿತ್ತು. ಅದೇ ಒಂದು ಮಹತ್ತರ ಕ್ರಾಂತಿಯಾಗಿತ್ತು. ಮಹಾಸಾಗರಗಳ ಅಡಿಯಲ್ಲಿ ಕೇಬಲ್ಲುಗಳನ್ನು ಎಳೆದು ಖಂಡಾಂತರ ಸಂಪರ್ಕ ಸಾಧಿಸುವ ವ್ಯವಸ್ಥೆ ಜಾರಿಗೆ ಬಂದಿದ್ದು ಮನುಕುಲದ ದೊಡ್ಡ ಸಾಧನೆ. ಅಲ್ಲಿಯವರೆಗೂ ಖಂಡಾಂತರ ಸಂಪರ್ಕಕ್ಕೆ ಇದ್ದ ಏಕೈಕ ಸಾಧನ ಪತ್ರಗಳು. ಪತ್ರಬರೆದರೆ ಸಮುದ್ರ ಮೂಲಕ ಹೋಗಲು ತಿಂಗಳುಗಟ್ಟಲೆ ಬೇಕಾಗುತ್ತಿತ್ತು. ಕೇಬಲ್ಲುಗಳನ್ನು ಎಳೆದಾಗ ಈ ಸಮಸ್ಯೆ ಬಗೆಹರಿಯಿತು. ಟೆಲಿಫೋನು ಬಹುದೊಡ್ಡ ಸಂಪರ್ಕ ಕ್ರಾಂತಿಯಾಗಿ ಕಾಣಿಸಿಕೊಂಡಿತು.
ಮಲೆನಾಡಿನ ಹಳ್ಳಿಗಳಲ್ಲಿ ಕಾಡು ಮೇಡುಗಳನ್ನು ಬೇಧಿಸಿಕೊಂಡು ಟೆಲಿಪೋನು ತಂತಿಗಳನ್ನು ಎಳೆದು, ಮನೆಮನೆಗಳಲ್ಲಿ ಫೋನೆಂಬ ಪೆಟ್ಟಿಗೆ ಬಂದು ಕುಳಿತಾಗ ಜನಕ್ಕೆ ಆಗುತ್ತಿದ್ದ ರೋಮಾಂಚನವನ್ನು ನಾನು ಚಿಕ್ಕಂದಿನಲ್ಲಿ ವಾನಳ್ಳಿಗೆ ಫೋನುಬಂದಾಗ ಕಂಡಿದ್ದೇನೆ. ಟೆಲಿಫೋನು ಗುಣಗುಣಿಸಿದರೆ ಮುದುಕರು ಹೆದರಿಬೀಳುತ್ತಿದ್ದರು. ಮಕ್ಕಳು ಕುಂಯ್ ಗುಡುತ್ತಿದ್ದರು. ಆರಂಭದಲ್ಲಿ ಮಲೆನಾಡಿನ ಮನೆಗಳಲ್ಲಿ ಫೋನೆಂಬುದು ಅಲಂಕಾರದ ಪೆಟ್ಟಿಗೆಯಾಗುವುದೇ ಹೆಚ್ಚಿತ್ತು. ಒಂದಲ್ಲ ಒಂದು ಕಡೆ ಮರಬಿದ್ದು ತಂತಿಹರಿದು ಫೋನು ಸತ್ತಂತಾಗುತ್ತಿತ್ತು. ಮಳೆಗಾಲದಲ್ಲಂತೂ ನಾಲ್ಕುತಿಂಗಳು ದೂರವಾಣಿಯನ್ನು ಮರೆತುಬಿಡಬೇಕಾಗುತ್ತಿತ್ತು.
ಇದೆಲ್ಲ ಯಾಕೆ ನೆನಪಿಗೆ ಬಂತೆಂದರೆ…….ಮೊನ್ನೆ ಜುಲೈ 30ರಂದು ಪತ್ರಿಕೆ ಓದುತ್ತಿದ್ದಾಗ ಮೊಬೈಲು ಭಾರತಕ್ಕೆ ಬಂದು ಹದಿನೈದು ವರ್ಷವಾಯಿತು ಎಂಬ ಸುದ್ದಿ ಓದಿದೆ. ಜುಲೈ30,1995ರಂದು ಸಂಪರ್ಕ ಸಚಿವ ಸುಖರಾಮ್ ಆಗಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಜ್ಯೋತಿ ಬಸು ಅವರಿಗೆ ಫೋನಾಯಿಸುವ ಮೂಲಕ ಭಾರತದಲ್ಲಿ ಮೊಬೈಲು ಕ್ರಾಂತಿಗೆ ನಾಂದಿ ಹಾಡಿದ್ದರಂತೆ. ಒಂದು ಬಿಲಿಯನ್ ಜನರ ದೇಶದಲ್ಲಿ ಹದಿನೈದು ವರ್ಷದಲ್ಲಿ ಮೊಬೈಲು ಈ ಪರಿಕ್ರಾಂತಿ ಮಾಡಬಹುದೆಂದು ಯಾರು ನಿರೀಕ್ಷಿಸಿದ್ದರು? ಈಗ ಭಾರತದ ಜನಸಂಖ್ಯೆಯ ಶೇಕಡಾ63.5 ಜನ ಮೊಬೈಲು ಬಳಸುವವರು! ಜುಲೈ 30ರ ಹೊತ್ತಿಗೆ ಭಾರತದಲ್ಲಿದ್ದ ಮೊಬೈಲು ಗ್ರಾಹಕರ ಸಂಖ್ಯೆ 635.51 ಮಿಲಿಯ, ಪ್ರತಿತಿಂಗಳು ಹತ್ತು ಮಿಲಿಯನ್ ಜನ ಮೊಬೈಲು ಮಾಲಿಕರಾಗುತ್ತಿದ್ದಾರೆ ಎಂಬುದು ಈಚಿನ ವರದಿ. ಜಗತ್ತಿನ ಬಹುಪಾಲು ದೇಶಗಳ ಜನಸಂಖ್ಯೆಯೇ ಹತ್ತು ಮಿಲಿಯವಿಲ್ಲ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ!
ಈಗ ಮೊಬೈಲು ಎಂಬುದು ‘ಎಲ್ಲಿಬೇಕಾದರೂ ಹಾಗೂ ಯಾವಾಗಬೇಕಾದರೂ’ ಎನಿಸಿಕೊಳ್ಳುವ ಸಾಧನ. ಕನ್ನಡದಲ್ಲಿ ಇದನ್ನು ಬೇರೆ ಬೇರೆ ಹೆಸರಿಂದ ಕರೆಯುವ ಪ್ರಯತ್ನಗಳು ನಡೆದರೂ ಈಗ ಮೊಬೈಲು ಎಂಬುದು ಸರ್ವಮಾನ್ಯತೆ ಪಡೆದಂತಿದೆ.ಜಂಗಮಗಂಟೆ ಎಂದು ಯಾರು ಬಳಸಿದ್ದೋ ಗೊತ್ತಿಲ್ಲ. ಆದರೆ ಈ ಹೆಸರು ಮಾಮಿಕವಾಗಿದೆ. ಹಿಂದೆ ಮೊಬೈಲಿನ ಬೆಲೆ ಜನಸಾಮಾನ್ಯರ ಕೈಗೆ ಎಟುಕುವಂತಿರಲಿಲ್ಲ. ಗಾತ್ರ ಎಲ್ಲರ ಕೈಯಲ್ಲಿ ಹಿಡಿಯುವಂತಿರಲಿಲ್ಲ. ಜೇಬೊಳಗೆ ಇಳಿಬಿಟ್ಟರೆ ಜೇಬು ಹರಿಯುವಷ್ಟು ಭಾರವಿರುತ್ತಿತ್ತು. ಕಿವಿಗೆ ಮೊಬೈಲು ಹಚ್ಚಿಕೊಂಡು ಕತ್ತುವಾರೆ ಮಾಡಿಕೊಂಡು ರಸ್ತೆಯಮೇಲೆ ನಡೆಯುವುದೊಂದು ಘನತೆಯ ವಿಷಯವಾಗಿತ್ತು. ಈಗ ಹಾಗಲ್ಲ. ಮಕ್ಕಳಿಂದ ಮುದುಕರವರೆಗೆ, ‘ಎಲ್ಲರಿಗೂ ಎಲ್ಲಕಾಲದಲ್ಲು’ ಬೇಕಾಗುವ ಸಾಧನ ಎಂಬಂತಾಗಿದೆ. ಅದರ ಗಾತ್ರ ಚಿಕ್ಕದಾಗಿದೆ. ಆಕಾರ ಆಕರ್ಷಕವಾಗಿದೆ. ಜೊತೆಗೆ ಅದು ಕೇವಲ ಫೋನಲ್ಲ. ಫೋಟೋ ತೆಗೆಯುವ ಕೆಮರಾ, ಸುದ್ದಿ ಕೇಳಬಹುದಾದ ರೇಡಿಯೋ, ಹಾಡು ಕೇಳುವ ಟೇಪ್ ರೆಕಾರ್ಡರು, ಧ್ವನಿಮುದ್ರಕ, ಸಮಯ ಕಳೆಯುವ ಆಟಗೆ, ಲೆಕ್ಕಮಾಡುವ ಗಣಕ ಯಂತ್ರ, ಮುಂತಾಗಿ ಮುಂತಾಗಿ ಅದರ ಸಾಧ್ಯತೆಗಳಿಗೂ ಉಪಯುಕ್ತತೆಗಳಿಗೂ ಲೆಕ್ಕವಿಲ್ಲ ಎಂಬಂತಾಗಿದೆ. ಒಂದು ಕಾಲದಲ್ಲಿ ಮೊಬೈಲು ಹಿಡಿದು ಓಡಾಡುವುದು ಪ್ರತಿಷ್ಠೆವಿಷಯವಾಗಿದ್ದರೆ ಇಂದು ಬಡತನವನ್ನು ನಿರ್ಧರಿಸಲು ಇದೂ ಒಂದು ಅಳತೆಗೋಲು ಎಂಬಂತಾಗಿದೆ. ‘ಅವರ ಬಳಿ ಒಂದು ಮೊಬೈಲೂ ಇಲ್ಲ’ ಎಂದರೆ- ಪಾಪ ಬಡವರು ಎಂಬ ಅರ್ಥ. ಮೊಬೈಲು ಹೊಂದದಿದ್ದರೆ ‘ಈ ಕಾಲದವರಲ’್ಲ ಎಂದು ತಮಾಷೆಮಾಡುತ್ತಾರೆ. ಈಗಿನ ಮೊಬೈಲುಗಳ ಸಂಕೀರ್ಣ ಕೆಲಸಕಾರ್ಯಗಳನ್ನು ಕಂಡರೆ ಕಂಪ್ಯೂಟರ್ ಸಾಕ್ಷರತೆ ಇರುವ ಹಾಗೆ ‘ಮೊಬೈಲು ಸಾಕ್ಷರತೆ’ ಎನ್ನಬಹುದೇನೋ. ಯಾರು ಮೊಬೈಲು ಬಳಸಲು ನಿಷ್ಣಾತರಲ್ಲವೋ, ಅವರದು ಮೊಬೈಲು ಅನಕ್ಷರತೆ!
ಮೊಬೈಲು ಎಷ್ಟರ ಮಟ್ಟಿಗೆ ನಮ್ಮ ಜೀವನದ ಭಾಗವಾಗಿದೆಯೆಂದರೆ ಸ್ವಲ್ಪ ಹೊತ್ತು ಮೊಬೈಲು ಇಲ್ಲದಿದ್ದರೆ ನೀರಿಂದ ಹೊರಬಂದ ಮೀನಂತೆ ಜನ ಆಡುತ್ತಾರೆ. ತರಗತಿಗೆ ಬರುವಾಗ ಮೊಬೈಲು ಸ್ವಿಚ್ಚು ಆರಿಸಿಬನ್ನಿ ಎಂದು ನಾನು ಒಮಾನಿ ಹುಡುಗರಿಗೆ ಹೇಳಿದರೆ ಅವರಿಗೆ ಅದು ಇಷ್ಟವಾಗುತ್ತಿರಲಿಲ್ಲ. ಗಂಭೀರವಾಗಿ ಪಾಠಮಾಡುವಾಗ ಮೊಬೈಲು ರಿಂಗಣಿಸುವ ಸಮಸ್ಯೆ ನಮ್ಮದೇಶದಲ್ಲೂ ಇದೆ. ಪ್ರಾಥಮಿಕ ಶಾಲೆಗಳ ಮಕ್ಕಳೂ ಮೊಬೈಲು ತರಲಾರಂಭಿಸಿ ಅದರಿಂದಾಗುವ ಉಪಟಳವನ್ನು ತಪ್ಪಿಸುವುದು ಶಾಲೆಗಳವರಿಗೆ ಸವಾಲಾಗಿದೆ. ಈಗ ಸಾರ್ವಜನಿಕ ಸಮಾರಂಭಗಳಲ್ಲಿ ಸಂಘಟಕರು ಮೊಬೈಲು ಆರಿಸುವಂತೆ ಮನವಿಮಾಡುವುದು, ಆದರೂ ಕೆಲವರ ಮೊಬೈಲು ನಡುನಡುವೆ ಕಿರುಗುಟ್ಟಿ ಕೋಪ ಬರಿಸುವುದು ಮಾಮೂಲು. ವಿಮಾನಗಳಲ್ಲಿ ಮೊಬೈಲು ಸ್ವಿಚ್ಚು ಆರಿಸುವಂತೆ ಗಗನಸಖಿ ವಿನಂತಿಸುತ್ತಾಳೆ. ಇದರ ತರಂಗಗಳು ವಿಮಾನ ಸಂಪರ್ಕಕ್ಕೆ ತೊಂದರೆ ಕೊಡಬಹುದು ಎಂಬ ಎಚ್ಚರಿಕೆ. ಅಲ್ಲಿಯೂ ಕೆಲವು ಬುದ್ಧಿವಂತರು ಮೊಬೈಲು ಆರಿಸುವುದಿಲ್ಲ. ಇದುಸರಳ ಕಾನೂನಿನ ಪ್ರಶ್ನೆಮಾತ್ರವಲ್ಲ, ಎಲ್ಲರ ಜೀವದ ಪ್ರಶ್ನೆ ಎಂಬುದು ಕೆಲವರಿಗೆ ಅರ್ಥವಾಗುವುದಿಲ್ಲ.
ಈ ಮೊಬೈಲಿಗೆ ನಮ್ಮ ಜನ ದಾಸರಾಗಿರುವ ರೀತಿ ತಮಾಷೆಯದೂ ಕೆಲವೊಮ್ಮ ವಿಷಾದ ಹುಟ್ಟಿಸುವಂತೆಯೂ ಇದೆ. ಸಾರ್ವಜನಿಕ ಮೂತ್ರಾಲಯವೊಂದರಲ್ಲಿ ಒಮ್ಮೆ ಕೇಳಿದ್ದು. ಪೋನು ಸದ್ದುಮಾಡಿತು. ಆತ ಒಂದುಕೈಯಲ್ಲಿ ಫೋನೆತ್ತಿ ಹಲೋ ಎಂದ. ಆಕಡೆಯಿಂದ ಧ್ವನಿ ‘ಏನುಮಾಡುತ್ತಿದ್ದೀರಿ’ ಎಂದಿತು. ಈತ ‘ಉಚ್ಚೆಮಾಡುತ್ತಿದ್ದೇನೆ’ ಎಂದ! ತಮಾಷೆಯೆಂದರೆ ಜಗತ್ತಿನಲ್ಲಿ ಏನೇನೂ ಕೆಲಸವಿಲ್ಲದವರೂ ಒಂದು ನಿಮಿಷ ಶೌಚಕ್ಕೆ ಹೋಗುವಾಗ ಕೂಡ ಪೋನನ್ನು ಬಿಟ್ಟಿರಲಾರದಷ್ಟು ಬಿಜಿಯಾಗಿಬಿಟ್ಟಿದ್ದಾರೆ! ಹವ್ಯಾಸಗಳ ಬಗ್ಗೆ ಹೇಳುತ್ತೇವೆ- ಮೊದಲು ನಾವು ಕುಡಿಯುತ್ತೇವೆ, ಆನಂತರ ಕುಡಿತವೇ ನಮ್ಮನ್ನು ಕುಡಿಯುತ್ತದೆ. ಈ ಮೊಬೈಲು ದಾಸ್ಯವೂ ಕೆಲವರನ್ನು ಕುಡಿದುಬಿಡುತ್ತದೋ ಎಂಬ ಆತಂಕ ನನ್ನದು. ಇಂಟರ್ ನೆಟ್ ಈಗಾಗಲೇ ಕೆಲವರಿಗೆ ಅಂಟಿದ ವ್ಯಾಧಿಯಾಗಿದೆ. ದೊಡ್ಡ ಸೆಮಿನಾರಿಗೆ ಹೋದಾಗ ಒಮ್ಮೆ ಪ್ರೊಫೆಸರರೊಬ್ಬರು ರಾತ್ರಿ ನಾವು ಊಟಮಾಡಿ ಬರುವಾಗ ಇಂಟರ್ನೆಟ್ಟಿನಲ್ಲ ಮಗ್ನರಾಗಿದ್ದರು. ಬೆಳಿಗ್ಗೆ ನಾವು ತಿಂಡಿಗೆ ಬಂದಾಗಲೂ ಇಂಟರ್ನೆಟ್ನಲ್ಲಿದ್ದರು. ‘ನೀವು ನಿದ್ದೆ ಮಾಡಿಲ್ಲವಾ’ ಎಂದು ಕೇಳಿದೆ. ನಿಜ ಹೊರಬಿತ್ತು.”"ಹೌದು ಇಂಟರ್ ನೆಟ್ ಊಟ ತಿಂಡಿಗಳನ್ನೂ ಮರೆಸುವ ಜೀವದ ಸಂಗಾತಿಯಾಗಿದೆ. ನನಗೆ ಕುಟುಂಬವಿಲ್ಲ. ಹೆಂಡತಿ ಡೈವೋಸರ್ು ಕೊಟ್ಟಿದ್ದಾಳೆ ಈಗ ಇಂಟರ್ ನೆಟ್ ಮಾತ್ರ ನನ್ನ ಸಂಗಾತಿ” ಎನ್ನುತ್ತಾ ಕುಲ ಗೋತ್ರ ಯಾವುದೂ ಗೊತ್ತಿಲ್ಲದ ಯಾರಜೊತೆಯೋ ಪ್ರೊಫೆಸರ್ ಸಾಹೇಬರು ಚಾಟಿಂಗು ಮಾಡತೊಡಗಿದರು!
ಮೊಬೈಲು ಸೇವೆಗಿಳಿದಿರುವ ಕಂಪನಿಗಳ ನಡುವಿನ ಸ್ಪಧರ್ೆಯಿಂದಾಗಿ ದರ ಇಳಿಸಿಕೊಂಡಿರುವ ಮೊಬೈಲುಗಳು ನಮ್ಮ ಹೈಕಳು ರಾತ್ರಿ ಹಗಲೆನ್ನದೇ ಗುಸು ಗುಸು ಮಾತಾಡಿಕೊಂಡಿರಲು ಅವಕಾಶಮಾಡಿಕೊಟ್ಟಿವೆ. ಒಮ್ಮೆ ಮೈಸೂರಿನಿಂದ ಬೆಂಗಳೂರಿಗೆ ಬಸ್ಸಲ್ಲಿ ಹೋಗುವಾಗ ಹಿಂದಿನ ಸೀಟಿನ ಯುವತಿ ಮೂರೂವರೆ ಗಂಟೆಯುದ್ದಕ್ಕೂ ಪಿಸುಮಾತು ಆಡುವುದ ಕಂಡೆ. ಅದರ ಬಗ್ಗೆ ಹೊಟ್ಟೆ ಕಿಚ್ಚಲ್ಲ, ಅವರ ಮೊಬೈಲು, ಅವರ ದುಡ್ಡು ನಮ್ಮದೇನು ಗಂಟು ಹೋಗುವುದು ಎಂಬುದು ನಿಜ. ಕೇವಲ ಹದಿನೈದು ವರ್ಷಗಳಲ್ಲಿ ಮೊಬೈಲು ಅದೆಂಥ ಕ್ರಾಂತಿ ಉಂಟುಮಾಡಿತು! 25ರಿಂದ 35ಸಾವಿರ ರೂಪಾಯಿಗಳು ಮೊಬೈಲು ಸೆಟ್ಟಿಗಿತ್ತಲ್ಲ? ಹಾಗೆಯೇ ಒಂದು ನಿಮಿಷಕ್ಕೆ 35ರೂಪಾಯಿ ಮೊಬೈಲು ಕರೆಗಿತ್ತು! ಅಭಿವೃಧ್ಧಿ ಶೀಲ ದೇಶವನ್ನು ಕಲ್ಪನೆ ಮಾಡಿಕೊಳ್ಳುವಾಗ, ಕೆಲವರ್ಷಗಳ ಹಿಂದೆ ಒಮ್ಮ ಬೆಳಗಿನ ಜಾವ ಮಂಗಳೂರಲ್ಲಿ ನೋಡಿದ ದೃಶ್ಯ ನನ್ನ ಕಣ್ಣೆದುರು ಬರುತ್ತದೆ. ಅಂದು ಬೀದಿ ಗುಡಿಸುತ್ತಿದ್ದ ಜಾಡಮಾಲಿ ಹೆಣ್ಣು ಮಗಳು ಒಂದು ಕೈಯಲ್ಲಿ ಮೊಬೈಲು ಹಿಡಿದು ಗುಡಿಸುತ್ತಿದ್ದಳು. ನಾನು ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ ಹೀಗಾಗಿ ಫೋಟೋ ತೆಗೆಯುವಂತಿರಲಿಲ್ಲ. ತೆಗೆದಿದ್ದರೆ ಅದು ಖಂಡಿತವಾಗಿ ನಮ್ಮ ಅಭಿವೃಧ್ಧಿಶೀಲತೆಗೆ ಬರೆದ ಬಾಷ್ಯವಾಗುತ್ತಿತ್ತು. ಒಳ್ಳೆಯ ಪ್ರತೀಕವಾಗುತ್ತಿತ್ತು! ಮೊಬೈಲು ಜನಪ್ರಿಯಗೊಂಡ ಕಾಲದಲ್ಲಿ ಬದುಕಿರುವುದು ನಮ್ಮ ಪುಣ್ಯ. ಇನ್ನು ಮುಂದಕ್ಕೆ ಮೊಬೈಲು ಕ್ಷೇತ್ರದಲ್ಲಿ ಎಷ್ಟೆಲ್ಲ ಬದಲಾವಣೆಗಳಾಗಬಹುದು ಆಗ ಮಾತ್ರ ‘ಛೇ – ನಾವು ಇನ್ನೂ ತಡೆದು ಹುಟ್ಟಬೇಕಿತ್ತು ಅನಿಸಬಹುದು! ‘ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನ ನುಡಿಯನ್ನು ನಮ್ಮೆದುರೆ ಸಾಬೀತುಮಾಡಿದ ಕೀತರ್ಿ ಈ ಮೊಬೈಲಿಗೆ ಸೇರಬೇಕು!